Monday, February 26, 2007

ಹೊಸ ಗರ್ವ: ಮುತ್ತಪ್ಪ ರೈ ಕೈಯಲ್ಲಿ ಗನ್ನಲ್ಲ, ಪೆನ್ನು!

ನಾರಾಯಣ ನಾರಾಯಣ!
ಮುತ್ತಪ್ಪ ರೈ ಕೈಯಲ್ಲೂ ಪೆನ್!
ಹೊಸ ರೂಪದಲ್ಲಿ ಮತ್ತೆ ಆರಂಭವಾದ 'ಗರ್ವ' ವಾರಪತ್ರಿಕೆಗೆ ಮುತ್ತಪ್ಪ ರೈ ಬರೆಯುತ್ತಿದ್ದಾರಂತೆ! ಭೂಗತ ಜಗತ್ತಿನಲ್ಲಿ ಗನ್ ಹಿಡಿಯುತ್ತಿದ್ದ ರೈ ಮುಂದೆ ಜೈಲಿನಿಂದಲೇ ಭೂಗತ ಜಗತ್ತನ್ನು ನಿಯಂತ್ರಿಸಿ ಸುದ್ದಿ ಮಾಡಿದ್ದರು. ಈಗ ವಾರ ಪತ್ರಿಕೆಯೊಂದಕ್ಕೆ ಅವರು ಗೌರವ ಸಂಪಾದಕರು.
ವಾರ ಪತ್ರಿಕೆಗಳ ವಾರ್ ಆರಂಭವಾಗುತ್ತಿರುವ ಸೂಚನೆ ಕಂಡುಬರುತ್ತಿದ್ದು, ಓದುಗರು ಸತತ ಬದಲಾವಣೆಯನ್ನು ಕಾಣುತ್ತಿದ್ದಾರೆ. ಇದೇ ವೇಳೆ ಇಂದ್ರಜಿತ್ ಲಂಕೇಶರ ಲಂಕೇಶ್ ಪತ್ರಿಕೆಯನ್ನು ನಂದಿ ಕಾರಿಡಾರನ ಅಶೋಕ್ ಖೇಣಿ ಖರೀದಿಸಲಿದ್ದಾರೆಂಬ ಸುದ್ದಿಯಿದೆ. ಇರುವ ಟ್ಯಾಬ್ಲಾಯ್ಡ್ ಗಳಲ್ಲಿ ಅತ್ಯಂತ ಹಳೆಯ ವಿಕ್ರಮ ಈಗಾಗಲೇ ಹೊಸ ಸಂಪಾದಕ ಸುಧೀಂದ್ರ ಕಂಚಿತೋಟ ನೇತೃತ್ವದಲ್ಲಿ ಹೊಸ ಖದರನ್ನು ಪಡೆದುಕೊಂಡಿದೆ.
ವಿಧಾನ ಸೌಧದಲ್ಲಿ ಬಾಂಬ್ ಇಟ್ಟು ಭಯೋತ್ಪಾದನೆಯ ವಿರುದ್ಧ ಹೋರಾಟದಿಂದ ಸುದ್ದಿ ಮಾಡಿದ ಮಾಜಿ ಪೊಲೀಸ್ ಅದಿಕಾರಿ ಗಿರೀಶ್ ಮಟ್ಟಣ್ಣವರ್ ಈಗ ಗರ್ವದಲ್ಲಿ ಎನ್-ಕೌಂಟರ್ ಅಂಕಣ ಬರೆಯುತ್ತಿದ್ದಾರೆ. ಹೊಸ ಗರ್ವದ ಹಿಂದಿರುವ ಮುಖ್ಯ ಕೈ ಅವರದೆ ಎಂದು ಹೇಳಲಾಗುತ್ತಿದೆ. ಮೊದಲು ಹೇಳುತ್ತಿದ್ದುದನ್ನೇ ಇನ್ನೂ ಜೋರಾಗಿ ಕೂಗಿ ಹೇಳುವ ಉದ್ದೇಶವಿದೆ ಎಂದು ಗರ್ವದ ಸಂಪಾದಕೀಯ ಸೂಚಿಸಿದೆ. ಗರ್ವ ತನ್ನ ಸದಭಿರುಚಿಯನ್ನು ಉಳಿಸಿಕೊಳ್ಳುತ್ತಿದೆಯೇ ಅಲ್ಲ ಹಳದಿ ಬಣ್ಣಕ್ಕೆ ತಿರುಗುತ್ತದೆಯೇ ಕಾಡು ನೋಡಬೇಕಿದೆ.
ಮಾಜಿ ಭೂಗತ ದೊರೆಯ ಗನ್(ಅಲ್ಲ ಪೆನ್) ಮತ್ತು ಮಾಜಿ ಪೋಲಿಸ್ ಅಧಿಕಾರಿಯ ಎನ್ಕೌಂಟರ್ -ಗರ್ವ ಸ್ವಾಭಿಮಾನವೋ ಅಲ್ಲ ಅಹಂಕಾರವೋ ಅರ್ಥವಾಗುತ್ತಿಲ್ಲ. ನಾರಾಯಣ ನಾರಾಯಣ!

No comments: