Thursday, December 24, 2009

ನಾನು ರೇಣುಕಾಚಾರ್ಯ ಬಣದ ವಿರೋಧಿಯಲ್ಲ: ಸ್ಪಷ್ಟನೆ


ನಾರಾಯಣ ನಾರಾಯಣ!

ರೇಣುಕಾಚಾರ್ಯ ಬಣಕ್ಕೆ ನಾನು  ವಿರೋಧಿ ಎಂಬ ಮಾತು ರಾಜಕೀಯ ವಲಯದಲ್ಲೆಲ್ಲ ಹಬ್ಬಿಕೊಂಡಿರುವುದರಿಂದಲೇ ಹೀಗೊಂದು ಸ್ಪಷ್ಟನೆ ನೀಡಬೇಕಾಗಿದೆ. ಯಾವುದೇ ರಾಜಕೀಯ/ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುವುದು ಅಭ್ಯಾಸ. ನಾನೇನಾದ್ರು ಹೋಗದೇ ಇದ್ರೆ "ಸುತ್ತಾಡೋದು ಬಿಟ್ಟು ಬೇರೆ ಕೆಲ್ಸ ಇಲ್ಲ, ಆದ್ರೂ ನಂ ಕಾರ್ಯಕ್ರಮಕ್ಕೆ ಬರೋಕಾಗಲ್ವ" ಅಂತ ಜನ ಬೈತಾರೆ. ಹಾಗಾಗಿ ಎಲಾ ಕಡೆ ಹೋಗ್ತಾ ಇರ್ತೇನೆ.
ಆದ್ರೆ, ಮೊನ್ನೆ ರೇಣುಕಾಚಾರ್ಯ ಬಣದ ಎಲ್ಲಾ ಸಚಿವರೂ ಮಂತ್ರಿಗಳಾದ್ರೂ ನಾನು ಪ್ರಮಾಣವಚನ ಸಮಾರಂಭಕ್ಕೆ ಹೋಗಿರ್ಲಿಲ್ಲ.
 (ಮಾಜಿ/ಹಾಲಿ)ಸಚಿವರಾದ ರೇಣುಕಾಚಾರ್ಯ ನೇತೃತ್ವದ ಏಕ ಸದಸ್ಯ ಬಣವು ಬಿಜೆಪಿಯಲ್ಲಿನ ಹಲವಾರು ಬಣಗಳಲ್ಲೊಂದು. ಯಾವಾಗ ಸಚಿವರಾಗಿರುತ್ತಾರೆ, ಯಾವಾಗ ಮಾಜಿಯಾಗುತ್ತಾರೆಂಬುದು ರಾಜಕೀಯದಲ್ಲಿ ಹೇಳುವುದು ಅಷ್ಟೊಂದು ಸುಲಭವಲ್ಲದ ಕಾರಣ ನೀವು ಓದುವ ಸಂದರ್ಭದಲ್ಲಿನ ಸಮಯದಲ್ಲಿ ಸಚಿವರಾಗಿಲ್ಲದ ಸಾಧ್ಯತೆಯಿರುವುದರಿಂದ "ಮಾಜಿ" ಎಂಬುದನ್ನು ಜೊತೆಯಲ್ಲಿ ಸೇರಿಸಲಾಗಿದೆ.
ವಾಸ್ತವ ಇಷ್ಟೆ:
 ಬಿಜೆಪಿಯಲ್ಲಿ ಮಾತ್ರವಲ್ಲ, ಎಲ್ಲಾ ಪಕ್ಷಗಳಲ್ಲಿನ ಎಲ್ಲಾ ಬಣಗಳಲ್ಲಿನ ನಾಯಕರೂ ನನಗೆ ಆಪ್ತರೇ. ರೇಣುಕಾಚಾರ್ಯ ಬಣಕ್ಕೆ ಮಂತ್ರಿಗಿರಿ ನೀಡಿದ್ದನ್ನು ವಿರೋಧಿಸಿ ಬಿಜೆಪಿಯ ಅನೇಕ ಬಣಗಳಲ್ಲಿ ಅಪಸ್ವರ ಎದ್ದಿತ್ತು. ಆ ಬಣಗಳವರೂ ನನ್ನನ್ನ ಪ್ರಮಾಣ ವಚನ ವಿರೋಧೀ ಮಾತುಕತೆಗಳಿಗೆ ಆಮಂತ್ರಿಸಿರುವ ಕಾರಣ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಜೊತೆಗೆ ರೇಣುಕಾಚಾರ್ಯ ವಿರೋಧಿಗಳ ಬಳಿಗೂ ನಾನು ಹೋಗಿಲ್ಲ. ಹಾಗೆಂದು ನಾನು ರೇಣುಕಾಚಾರ್ಯ ಬಣದ ಪರವೂ ಅಲ್ಲ.

 ಅದಿರ್ಲಿ,
ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋದವರು ಹೇಳಿದ್ದು:
ಈ ಇಂಥ ಮನುಷ್ಯರಿಗೂ ಅಧಿಕಾರ ಬೋಧಿಸ್ಬೇಕಾ? ನಂಗಾಗಲ್ಲ... ಅಂತ ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ಕರೆದು ಹೇಳಿದ್ರಂತೆ. ಅವರನ್ನು ಸಮಾಧಾನ ಪಡಿಸಿದ ಮುಖ್ಯಮಂತ್ರಿಗಳು, ಈಗಾಗ್ಲೇ ಅವರ ರಾಜೀನಾಮೆ ಪತ್ರ ಕೇಳಿ ನನ್ನ ಜೋಬಲ್ಲಿಟ್ಟುಕೊಂಡಿದ್ದೇನೆ. ನೀವೇನೂ ಭಯ ಪಡೋ ಅಗತ್ಯ ಇಲ್ಲ, ನೀವ್ಯಾವಾಗ ಬೇಕಾದ್ರೂ ಕೇಳಿ, ಅವರ ರಾಜೀನಾಮೆಯನ್ನು ನಿಮಗೆ ನೀಡ್ತೇನೆ ಅಂತ ಮುಖ್ಯಮಂತ್ರಿ ಹೇಳಿದ್ರಂತೆ.
ಇದು ರಾಜಕೀಯ... ನಮಗಂತೂ ಅರ್ಥ ಆಗಲ್ಲ ಬಿಡಿ.
ನಾರಾಯಣ ನಾರಾಯಣ!

Sunday, December 13, 2009

ಸಿನೆಮಾ ಮಂದಿರಗಳ ಹೊರಗೊಂದು ರೌಂಡ್ ಅಪ್

ನಾರಾಯಣ ನಾರಾಯಣ!
ಅದೊಂದು ಸಿನೆಮಾ!
ಒಂದಷ್ಟು ಮಳೆ, ಮಳೆಯಲ್ಲಿ ಒಂದಷ್ಟು ಭಾವಾವೇಶದ ಮಾತುಗಳು, ಕೊಡಗಿಗೆ ಪ್ರಯಾಣ ನಡೆಸಿ ಅಲ್ಲೊಂದಿಷ್ಟು ಲವ್ ಸ್ಟೋರಿ, ಒಂದು ಮದುವೆ ಮನೆ, ಮಾತಿನ ಮಲ್ಲ ನಾಯಕ(ಗಣೇಶ್), ಒಬ್ಬರು ಮಿಲಿಟ್ರಿ ಅಂಕಲ್, ಇವೆಲ್ಲಾ ಇರೋ ಸಿನೆಮಾ ಉಲ್ಲಾಸದಿಂದಲೇ ಆರಂಭವಾಗುತ್ತದೆ. ಸ್ವಲ್ಪ ಹಾಸ್ಯ ಕೂಡಾ, ಆದರೆ ಸಮಯ ಕಳೆದಂತೆ ಕಥೆ ಗಂಭೀರವಾಗುತ್ತಾ ಸಾಗುತ್ತದೆ. ಕೊನೆಗೆ ಕೈ ತುಂಬ ಹೂ ಹಿಡಿದುಕೊಂಡ ನಾಯಕನನ್ನು ನೋಡಿ ಎಲ್ಲ ಪ್ರೇಕ್ಷಕರೂ ಕಣ್ಣೀರು ಕಾಕುತ್ತಾರೆ.
ಅಲ್ಲ. ಇದು ಮುಂಗಾರು ಮಳೆಯ ಕಥೆಯಲ್ಲ. ಮಳೆಯಲಿ ಜೊತೆಯಲಿ ಸಿನೆಮಾದ ಬಗ್ಗೆ ನಾನು ಹೇಳ್ತಾ ಇರೋದು. ಇದೆಲ್ಲಾ ದೃಷ್ಯ ಮುಂಗಾರುವಿನಲ್ಲೂ ನೋಡಿದೀನಲ್ಲಾ ಅಂತ ತಲೆ ಚಚ್ಚೋ ಅಗತ್ಯವಿಲ್ಲ. ಅದೇ ಪ್ರೀತಂ ಬರೆದ ಇನ್ನೊಂದು ಕಥೆಯಂತೆ ಇದು. ಮುಂಗಾರು ಮಳೆ ಯಾಕೆ ಗೆಲ್ತು ಅನ್ನೋದನ್ನ ಅಧ್ಯಯನ ಮಾಡಿ ಆ ಎಲ್ಲಾ ಅಂಶಗಳನ್ನು ಸೇರಿಸಿ ಇನ್ನೊಂದು ಸಿನೆಮಾ ಮಾಡಿದಾರಂತೆ!
ಅಂದ ಹಾಗೆ, ನಾನಂತೂ ಮಳೆಯಲಿ.. ಸಿನೆಮಾ ನೋಡಿಲ್ಲ. ಮತ್ತೆ ಹೇಗೊತ್ತು ಇಷ್ಟೆಲ್ಲ ಅಂತಾನ?

ನಾರಾಯಣ ನಾರಾಯಣ!
ನಾಲ್ಕು ಪೇಪರಿನಲ್ಲಿ ಬಂದ ವಿಮರ್ಶೆ ಓದಿದ್ರೆ ಇದೆಲ್ಲಾ ಗೊತ್ತಾಗುತ್ತಲ್ವ? ಹಾಗೇ, ಊರು ಸುತ್ತೋ ನಾನು ನಾಲ್ಕು ಜನರ ಹತ್ರ ಮಾತಾಡಿದ್ರೆ ಇದೆಲ್ಲಾ ಹೇಳ್ತಾರೆ.
ನೀವೇನಾದ್ರೂ ವಿಕ ಓದಿದ್ರಾ? ಅದರಲ್ಲಿ ಹೀಗೇನೂ ಇರಲಿಲ್ಲ ಯಾಕೆ ಅಂತ್ಲಾ? (ವಿಕ ಓದದಿದ್ರೆ ಕೇಳಿ, ಮಳೆಯಲಿ... ಓಡ್ತಾ ಇರೋ ಎಲ್ಲಾ ೪೦ ಚಿತ್ರಮಂದಿರಗಳ ಮಾಲಿಕರೂ, ಧೂಳು ಹಿಡಿದಿದ್ದ "House Full" ಫಲಕಗಳನ್ನು ಒರೆಸಿ ತೆಗೆದಿದ್ದಾರೆ ಅಥವಾ ಹೊಸದಾಗಿ ಮಾಡಿಸಿದ್ದಾರಂತೆ.)
ಗುಟ್ಟು: ವಿಕದಲ್ಲಿ ವಿಮರ್ಶೆ ಬರೀತಿದ್ದಾ ದೇವಶೆಟ್ಟಿ ಮಹೇಶ್ ಈ ಸಿನೆಮಾಗೆ ಸಂಭಾಷಣೆ ಬರೆದಿದ್ದಾರೆ.
ಸಿನೆಮಾ ಹಿಟ್ ಆಗ್ಬೇಕಾ? ಮಳೆ, ಮಾತು, ಗನ್ ಮ್ಯಾನ್, ಮೊಲ ಏನೂ ಬೇಕೇ ಅಂತೇನಿಲ್ಲ, ದಿನ ಪತ್ರಿಕೆಗಳಲ್ಲಿ ವಿಮರ್ಶೆ ಬರೊಯೋರ ಹತ್ರ ಸಂಭಾಷಣೆ ಬರೆಸಿ!