Thursday, July 29, 2010

ಶ್ರೀರಾಮುಲು ಕಟ್

ನಾರಾಯಣ ನಾರಾಯಣ!

ಕ್ಷೌರದಂಗಡಿಗೆ ಹೋಗಿದ್ದೆ. ಹೌದು, ನಾನೆ... ಯಾಕೆ?
ಓ, ಜುಟ್ಟು ಬಿಟ್ಟಿರೋ ನಾನ್ಯಾಕೆ ಕ್ಷೌರದಂಗಡಿಗೆ ಅಂತಾನ? ಗುಟ್ಟಿರೋದೇ ಅಲ್ಲಿ. ಲೋಕದ ಸುದ್ದಿಗಳೆಲ್ಲ ನಂಗೆ ಗೊತ್ತಾಗೋದೇ ಅಲ್ಲಿ! ಕ್ಷೌರಕ್ಕೆ ಕಾಯೋರ ಮಾತುಗಳು ನಂಗೆ ಎಷ್ಟೋ ಸುದ್ದಿಗಳ ಮೂಲ. ಇವತ್ತು ಯಾವ ಸುದ್ದಿ ಸಿಗುತ್ತೆ ಅನ್ನೋ ಕುತೂಹಲದಲ್ಲಿದ್ದಾಗಲೇ ಕುರ್ಚಿ ಮೇಲೆ ಕೂತವನು ಶ್ರೀರಾಮುಲು ಕಟ್ ಅಂದು ಬಿಟ್ಟ. ಉದ್ದ ಕೂದಲು ಬಿಡೋ ಶ್ರೀರಾಮುಲು ವಿನ್ಯಾಸ ಯಾಕೆ ಅಂತ ಕುತೂಹಲದಿಂದಲೇ ಕೇಳಿದೆ.

ಶ್! ಅಂದವನೇ ಅಲ್ಲಿದ್ದ ಟಿವಿಯತ್ತ ತನ್ನ ಕಣ್ಣು ನೆಟ್ಟ. ಯಾವಾಗಲೂ ಸನ್ ಟಿವಿ ಇರ್ತಿದ್ದ ಟಿವಿಯಲ್ಲಿ ಟಿವಿ9 ಬರ್ತಾ ಇತ್ತು!
ಬಳ್ಳಾರಿಗೆ ಕೆಟ್ಟ ದೃಷ್ಟಿ ಅಂತಾರೆ ಶ್ರೀರಾಮುಲು ಮತ್ತು ರೆಡ್ಡಿ ಬ್ರದರ್ಸ್, ಅವರಿನ್ನೂ ಬಚ್ಚಾ ಅಂತಾರೆ ಕಾಂಗ್ರೆಸ್, ಇದು ಈ ಹೊತ್ತಿನ ವಿಷೇಶ -ಶ್ರೀರಾಮುಲು ಕಟ್.

ಕೇಶ ಮಂಡನ ವಿಶೇಷ ಕಾರ್ಯಕ್ರಮಕ್ಕೆ ಸ್ವಾಗತ... ಅಂತೆಲ್ಲಾ ಕೇಳಿದಾಗ ಅರ್ಥ ಆಯ್ತು ಇದ್ಯಾವ ಕಟ್ ಅಂತ!
ಅಲ್ಲ, ಅರುವತ್ತು ವರ್ಷದಿಂದ ಬಳ್ಳಾರಿಯ ಕಡೆಗೆ ತಲೆಯೇ ಹಾಕದ ಕಾಂಗ್ರೆಸ್ ಈಗೇಕೆ ಇಲ್ಲಿ ಬರ್ತಾ ಇದೆ ಅಂತ ಬಳ್ಳಾರಿಯ  ಜನಕ್ಕೆಲ್ಲಾ ಭಯವಾಗಿದೆಯಂತೆ. ಹಿಂದೊಮ್ಮೆ ಇದೇ ಕ್ಷೇತ್ರದಿಂದ ಲೋಕಸಭೆಗೆ ಗೆದ್ದಿದ್ದ ಸೋನಿಯಾಗೆ ಬಳ್ಳಾರಿ ಹೆಸರು ಮತ್ತೆ ನೆನಪಾಗಿರಬಹುದು.

ಡ್ಯಾನ್ಸ್ ಮಾಡ್ತಾ, ಹಾಡು ಹಾಡ್ತಾ, ಭರ್ಜರಿ ಊಟದ ಜತೆಗೆ ಬಳ್ಳಾರಿ ಪಿಕ್-ನಿಕ್ ಹೊರಟಿರುವ ಪಾರ್ಟಿ ಆಡಳಿತ ಪಕ್ಷದ ಥರಾ ಸಂಭ್ರಮದಲ್ಲಿದ್ದಾರೆ. ಅವರಿಗೆ ಮೈಸೂರು ಪೇಟ, ಹಾರಾರ್ಪಣೆ ಇತ್ಯಾದಿ ನೋಡಿಯೇ ಜನ ಖುಶಿಯಾಗಿದ್ದಾರೆ. ಇಂತಹ ಹೋರಾಟಗಳನ್ನು ಮಾಡುತ್ತಲೇ ಬಂದ ಜನತಾ ಪರಿವಾರದಲ್ಲಿ ಅನುಭವ ಪಡೆದಿರುವ ಸಿದ್ರಾಮು, ಇಬ್ರಾಹಿಮ್ಮು, ದೇಸ್ಪಾಂಡೆ ಮೊದಲಾದವರೇ ಯಾತ್ರೆಯ ನೇತೃತ್ವ ವಹಿಸಿದ್ದು, ಅನುಭವ ಫಲ ನೀಡಿದೆ.
ವಿಪಕ್ಷದವರು ಇಷ್ಟೆಲ್ಲಾ ಸಂಭ್ರಮದಲ್ಲಿರುವಾಗ, ತಲೆ ಬೋಳಿಸಿ, ಕಪ್ಪು ಬಟ್ಟೆ ಧರಿಸಿ, ಬರಿಗಾಲು, ಮಿತಾಹಾರ ಮೂಲಕ ಆಡಳಿತ ಪಕ್ಷದವರು ವಿರೋಧದ ಮಾತಾಡುತ್ತಿದ್ದಾರಲ್ಲ!

ಇದು ಈ ಹೊತ್ತಿನ ವಿಷೇಶ... ಕ್ಷಣ ಕ್ಷಣದ ಸುದ್ದಿಗಾಗಿ

Monday, April 5, 2010

ಬಿಬಿಎಂಪಿ ಫಲಿತಾಂಶ -ಕುಮಾರಣ್ಣ ಫುಲ್ ಖುಷ್

ಬಿಬಿಎಂಪಿ ಚನಾವಣೆ ಮುಗಿದು ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಪತ್ರಿಕೆಗಳೆಲ್ಲ ಬಿಜೆಪಿ ಹಿಂದೆ ಬಿದ್ದಿದ್ರೆ ನಾನು ಮಾತ್ರ ವಿರೋಧ ಪಕ್ಷಗಳ ಹಿಂದೆ ಸುತ್ತಾಡಿ ಬಂದೆ.
ಕುಮಾರಣ್ಣ ಹೇಳಿದ್ದಿಷ್ಟು:
"ಈ ಬಿಬಿಎಂಪಿ ಚುನಾವಣೆ ಏನು ನಡೀತು... ಅದರ ಒಂದು ಫಲಿತಾಂಶ ಏನು ಬಂದಿದೆ..., ಅದರ ಬಗ್ಗೆ ನಂಗೆ ಏನು ಅನ್ನಿಸ್ತಾ ಇದೆ ಅಂದ್ರೆ, ಫಲಿತಾಂಶವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಜನತೆ ಜೆಡಿಎಸ್ ಪರವಾಗಿ ತೀರ್ಪು ನೀಡಿರುವುದು ಸ್ಪಷ್ಟವಾಗಿ ಕಂಡುಬರ್ತಾ ಇದೆ ಅನ್ನೋದನ್ನ ನಾನು ಹೇಳೋದಕ್ಕೆ ಇಚ್ಛೆ ಪಡ್ತೇನೆ. ಅದು ಹೇಗೆ ಅಂತಂದ್ರೆ, ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸುತ್ತೇ ಅನ್ನತಕ್ಕಂತಹ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಆದ್ರೆ ಬಹುಮತಕ್ಕೆ ಸ್ವಲ್ಪ ಕಡಿಮೆ ಸೀಟುಗಳನ್ನೇನಾದ್ರೂ ಪಡೆದು ಮತ್ತೆ ಈ ಆಪರೇಶನ್ ಕಮಲ ಅಂತ ಏನು ಕರೀತಾರೆ, ಅದ್ರ ಮೂಲಕ ನಮ್ಮ ಪಕ್ಷದ ವಿಜೇತರನ್ನು ಪಕ್ಷಾಂತರ ಮಾಡುವಂತಹ ನೀಚ ಕೆಲಸಕ್ಕೇನಾದ್ರು ಕೈ ಹಾಕ್ತಾರೋ ಅನ್ನೋ ಭಯ ನಮ್ಮೆಲ್ಲರನ್ನ ಕಾಡಿತ್ತು. ಆದ್ರೆ ಬೆಂಗಳೂರಿನ ಪ್ರಜ್ಞಾವಂತ ಮತದಾರರು ಯಾರಿದಾರೆ, ಅವರು ಬಿಜೆಪಿಗೆ ಬಹುಮತ ನೀಡಿಈ ಆಪರೇಶನ್ ಕಮಲವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಅಂತ ನಾನು ಹೇಳೋಕೆ ಇಚ್ಛೆ ಪಡ್ತೇನೆ. ಆಪರೇಶನ್ ಕಮಲದ ಅತ್ಯ ಬಿಜೆಪಿಗೆ ಬೀಳದೇ ಇರೋದಕ್ಕೆ ನಂಗೆ ತುಂಬಾ ಸಂತೋಷ ಆಗ್ತಾ ಇದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಬೆಂಗಳೂರಿನ ಅಭಿವೃದ್ಧಿಗೆ ಏನು ಶ್ರಮ ಪಟ್ಟಿದ್ದಾರೆ, ಅದರ ಪರಿಣಾಮ ಇಲ್ಲಿ ಸ್ಪಷ್ಟವಾಗಿ ಕಂಡುಬರ್ತದೆ.

ಇನ್ನು ದೇಶಪಾಂಡೆ ಅವರು ಏನಂತಾರೆ ಓದಿ:
ಬಿಜೆಪಿ ಸರಕಾರ ಅಭಿವೃದ್ಧಿ ವಿರೋಧಿ. ನಮ್ಮ ಪಕ್ಷ ಈ ಹಿಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಯಾಕೆ ಸೋತಿದೆ ಎಂಬ ಆತ್ಮ ವಿಮರ್ಶೆಯನ್ನು ಮಾಡ್ತಾ ಇದ್ದೇವೆ. ಅದಾದ ನಂತ್ರ ಬಿಬಿಎಂಪಿ ಚುನಾವಣೆಯ ಸೋಲಿನ ಬಗ್ಗೆಯೂ ವಿಮರ್ಶೆ ಮಾಡ್ತೇವೆ.  ಈಗ್ಲೇ ಏನೂ ಹೇಳಕ್ಕಾಗಲ್ಲ.

Monday, January 4, 2010

ಇನ್ನೆಂದೂ ಪಕ್ಷದಲ್ಲಿ ಅಶಿಸ್ತಿಲ್ಲ -ಸದಾನಂದ ಗೌಡ ಮತ್ತೊಮ್ಮೆ ಹೇಳಿಕೆ.

ಪಕ್ಷದಲ್ಲಿ ಇನ್ನುಮುಂದೆ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿಲ್ಲ. ನಾವು ಎಲ್ಲರೂ ಈಗ ಒಂದಾಗಿದ್ದೇವೆ ಎಂದು ಬ್ಜ್ಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಮತ್ತೆ ಹೇಳಿದ್ದಾರೆ. ಈ ಮೊದಲೂ ಅನೇಕ ಬಾರಿ ಗೊಂದಲಗಳುಂಟಾಗ ಇದೇ ರೀತಿ ಹೇಳಿದ್ದ ಅವರು, ಪದೇ ಪದೇ ಮಾತು ಬದಲಿಸುವ ವ್ಯಕ್ತಿಯಲ್ಲವೆಂದು ಸ್ಪಷ್ಟವಾಗಿದೆ.

Thursday, December 24, 2009

ನಾನು ರೇಣುಕಾಚಾರ್ಯ ಬಣದ ವಿರೋಧಿಯಲ್ಲ: ಸ್ಪಷ್ಟನೆ


ನಾರಾಯಣ ನಾರಾಯಣ!

ರೇಣುಕಾಚಾರ್ಯ ಬಣಕ್ಕೆ ನಾನು  ವಿರೋಧಿ ಎಂಬ ಮಾತು ರಾಜಕೀಯ ವಲಯದಲ್ಲೆಲ್ಲ ಹಬ್ಬಿಕೊಂಡಿರುವುದರಿಂದಲೇ ಹೀಗೊಂದು ಸ್ಪಷ್ಟನೆ ನೀಡಬೇಕಾಗಿದೆ. ಯಾವುದೇ ರಾಜಕೀಯ/ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುವುದು ಅಭ್ಯಾಸ. ನಾನೇನಾದ್ರು ಹೋಗದೇ ಇದ್ರೆ "ಸುತ್ತಾಡೋದು ಬಿಟ್ಟು ಬೇರೆ ಕೆಲ್ಸ ಇಲ್ಲ, ಆದ್ರೂ ನಂ ಕಾರ್ಯಕ್ರಮಕ್ಕೆ ಬರೋಕಾಗಲ್ವ" ಅಂತ ಜನ ಬೈತಾರೆ. ಹಾಗಾಗಿ ಎಲಾ ಕಡೆ ಹೋಗ್ತಾ ಇರ್ತೇನೆ.
ಆದ್ರೆ, ಮೊನ್ನೆ ರೇಣುಕಾಚಾರ್ಯ ಬಣದ ಎಲ್ಲಾ ಸಚಿವರೂ ಮಂತ್ರಿಗಳಾದ್ರೂ ನಾನು ಪ್ರಮಾಣವಚನ ಸಮಾರಂಭಕ್ಕೆ ಹೋಗಿರ್ಲಿಲ್ಲ.
 (ಮಾಜಿ/ಹಾಲಿ)ಸಚಿವರಾದ ರೇಣುಕಾಚಾರ್ಯ ನೇತೃತ್ವದ ಏಕ ಸದಸ್ಯ ಬಣವು ಬಿಜೆಪಿಯಲ್ಲಿನ ಹಲವಾರು ಬಣಗಳಲ್ಲೊಂದು. ಯಾವಾಗ ಸಚಿವರಾಗಿರುತ್ತಾರೆ, ಯಾವಾಗ ಮಾಜಿಯಾಗುತ್ತಾರೆಂಬುದು ರಾಜಕೀಯದಲ್ಲಿ ಹೇಳುವುದು ಅಷ್ಟೊಂದು ಸುಲಭವಲ್ಲದ ಕಾರಣ ನೀವು ಓದುವ ಸಂದರ್ಭದಲ್ಲಿನ ಸಮಯದಲ್ಲಿ ಸಚಿವರಾಗಿಲ್ಲದ ಸಾಧ್ಯತೆಯಿರುವುದರಿಂದ "ಮಾಜಿ" ಎಂಬುದನ್ನು ಜೊತೆಯಲ್ಲಿ ಸೇರಿಸಲಾಗಿದೆ.
ವಾಸ್ತವ ಇಷ್ಟೆ:
 ಬಿಜೆಪಿಯಲ್ಲಿ ಮಾತ್ರವಲ್ಲ, ಎಲ್ಲಾ ಪಕ್ಷಗಳಲ್ಲಿನ ಎಲ್ಲಾ ಬಣಗಳಲ್ಲಿನ ನಾಯಕರೂ ನನಗೆ ಆಪ್ತರೇ. ರೇಣುಕಾಚಾರ್ಯ ಬಣಕ್ಕೆ ಮಂತ್ರಿಗಿರಿ ನೀಡಿದ್ದನ್ನು ವಿರೋಧಿಸಿ ಬಿಜೆಪಿಯ ಅನೇಕ ಬಣಗಳಲ್ಲಿ ಅಪಸ್ವರ ಎದ್ದಿತ್ತು. ಆ ಬಣಗಳವರೂ ನನ್ನನ್ನ ಪ್ರಮಾಣ ವಚನ ವಿರೋಧೀ ಮಾತುಕತೆಗಳಿಗೆ ಆಮಂತ್ರಿಸಿರುವ ಕಾರಣ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಜೊತೆಗೆ ರೇಣುಕಾಚಾರ್ಯ ವಿರೋಧಿಗಳ ಬಳಿಗೂ ನಾನು ಹೋಗಿಲ್ಲ. ಹಾಗೆಂದು ನಾನು ರೇಣುಕಾಚಾರ್ಯ ಬಣದ ಪರವೂ ಅಲ್ಲ.

 ಅದಿರ್ಲಿ,
ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋದವರು ಹೇಳಿದ್ದು:
ಈ ಇಂಥ ಮನುಷ್ಯರಿಗೂ ಅಧಿಕಾರ ಬೋಧಿಸ್ಬೇಕಾ? ನಂಗಾಗಲ್ಲ... ಅಂತ ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ಕರೆದು ಹೇಳಿದ್ರಂತೆ. ಅವರನ್ನು ಸಮಾಧಾನ ಪಡಿಸಿದ ಮುಖ್ಯಮಂತ್ರಿಗಳು, ಈಗಾಗ್ಲೇ ಅವರ ರಾಜೀನಾಮೆ ಪತ್ರ ಕೇಳಿ ನನ್ನ ಜೋಬಲ್ಲಿಟ್ಟುಕೊಂಡಿದ್ದೇನೆ. ನೀವೇನೂ ಭಯ ಪಡೋ ಅಗತ್ಯ ಇಲ್ಲ, ನೀವ್ಯಾವಾಗ ಬೇಕಾದ್ರೂ ಕೇಳಿ, ಅವರ ರಾಜೀನಾಮೆಯನ್ನು ನಿಮಗೆ ನೀಡ್ತೇನೆ ಅಂತ ಮುಖ್ಯಮಂತ್ರಿ ಹೇಳಿದ್ರಂತೆ.
ಇದು ರಾಜಕೀಯ... ನಮಗಂತೂ ಅರ್ಥ ಆಗಲ್ಲ ಬಿಡಿ.
ನಾರಾಯಣ ನಾರಾಯಣ!

Sunday, December 13, 2009

ಸಿನೆಮಾ ಮಂದಿರಗಳ ಹೊರಗೊಂದು ರೌಂಡ್ ಅಪ್

ನಾರಾಯಣ ನಾರಾಯಣ!
ಅದೊಂದು ಸಿನೆಮಾ!
ಒಂದಷ್ಟು ಮಳೆ, ಮಳೆಯಲ್ಲಿ ಒಂದಷ್ಟು ಭಾವಾವೇಶದ ಮಾತುಗಳು, ಕೊಡಗಿಗೆ ಪ್ರಯಾಣ ನಡೆಸಿ ಅಲ್ಲೊಂದಿಷ್ಟು ಲವ್ ಸ್ಟೋರಿ, ಒಂದು ಮದುವೆ ಮನೆ, ಮಾತಿನ ಮಲ್ಲ ನಾಯಕ(ಗಣೇಶ್), ಒಬ್ಬರು ಮಿಲಿಟ್ರಿ ಅಂಕಲ್, ಇವೆಲ್ಲಾ ಇರೋ ಸಿನೆಮಾ ಉಲ್ಲಾಸದಿಂದಲೇ ಆರಂಭವಾಗುತ್ತದೆ. ಸ್ವಲ್ಪ ಹಾಸ್ಯ ಕೂಡಾ, ಆದರೆ ಸಮಯ ಕಳೆದಂತೆ ಕಥೆ ಗಂಭೀರವಾಗುತ್ತಾ ಸಾಗುತ್ತದೆ. ಕೊನೆಗೆ ಕೈ ತುಂಬ ಹೂ ಹಿಡಿದುಕೊಂಡ ನಾಯಕನನ್ನು ನೋಡಿ ಎಲ್ಲ ಪ್ರೇಕ್ಷಕರೂ ಕಣ್ಣೀರು ಕಾಕುತ್ತಾರೆ.
ಅಲ್ಲ. ಇದು ಮುಂಗಾರು ಮಳೆಯ ಕಥೆಯಲ್ಲ. ಮಳೆಯಲಿ ಜೊತೆಯಲಿ ಸಿನೆಮಾದ ಬಗ್ಗೆ ನಾನು ಹೇಳ್ತಾ ಇರೋದು. ಇದೆಲ್ಲಾ ದೃಷ್ಯ ಮುಂಗಾರುವಿನಲ್ಲೂ ನೋಡಿದೀನಲ್ಲಾ ಅಂತ ತಲೆ ಚಚ್ಚೋ ಅಗತ್ಯವಿಲ್ಲ. ಅದೇ ಪ್ರೀತಂ ಬರೆದ ಇನ್ನೊಂದು ಕಥೆಯಂತೆ ಇದು. ಮುಂಗಾರು ಮಳೆ ಯಾಕೆ ಗೆಲ್ತು ಅನ್ನೋದನ್ನ ಅಧ್ಯಯನ ಮಾಡಿ ಆ ಎಲ್ಲಾ ಅಂಶಗಳನ್ನು ಸೇರಿಸಿ ಇನ್ನೊಂದು ಸಿನೆಮಾ ಮಾಡಿದಾರಂತೆ!
ಅಂದ ಹಾಗೆ, ನಾನಂತೂ ಮಳೆಯಲಿ.. ಸಿನೆಮಾ ನೋಡಿಲ್ಲ. ಮತ್ತೆ ಹೇಗೊತ್ತು ಇಷ್ಟೆಲ್ಲ ಅಂತಾನ?

ನಾರಾಯಣ ನಾರಾಯಣ!
ನಾಲ್ಕು ಪೇಪರಿನಲ್ಲಿ ಬಂದ ವಿಮರ್ಶೆ ಓದಿದ್ರೆ ಇದೆಲ್ಲಾ ಗೊತ್ತಾಗುತ್ತಲ್ವ? ಹಾಗೇ, ಊರು ಸುತ್ತೋ ನಾನು ನಾಲ್ಕು ಜನರ ಹತ್ರ ಮಾತಾಡಿದ್ರೆ ಇದೆಲ್ಲಾ ಹೇಳ್ತಾರೆ.
ನೀವೇನಾದ್ರೂ ವಿಕ ಓದಿದ್ರಾ? ಅದರಲ್ಲಿ ಹೀಗೇನೂ ಇರಲಿಲ್ಲ ಯಾಕೆ ಅಂತ್ಲಾ? (ವಿಕ ಓದದಿದ್ರೆ ಕೇಳಿ, ಮಳೆಯಲಿ... ಓಡ್ತಾ ಇರೋ ಎಲ್ಲಾ ೪೦ ಚಿತ್ರಮಂದಿರಗಳ ಮಾಲಿಕರೂ, ಧೂಳು ಹಿಡಿದಿದ್ದ "House Full" ಫಲಕಗಳನ್ನು ಒರೆಸಿ ತೆಗೆದಿದ್ದಾರೆ ಅಥವಾ ಹೊಸದಾಗಿ ಮಾಡಿಸಿದ್ದಾರಂತೆ.)
ಗುಟ್ಟು: ವಿಕದಲ್ಲಿ ವಿಮರ್ಶೆ ಬರೀತಿದ್ದಾ ದೇವಶೆಟ್ಟಿ ಮಹೇಶ್ ಈ ಸಿನೆಮಾಗೆ ಸಂಭಾಷಣೆ ಬರೆದಿದ್ದಾರೆ.
ಸಿನೆಮಾ ಹಿಟ್ ಆಗ್ಬೇಕಾ? ಮಳೆ, ಮಾತು, ಗನ್ ಮ್ಯಾನ್, ಮೊಲ ಏನೂ ಬೇಕೇ ಅಂತೇನಿಲ್ಲ, ದಿನ ಪತ್ರಿಕೆಗಳಲ್ಲಿ ವಿಮರ್ಶೆ ಬರೊಯೋರ ಹತ್ರ ಸಂಭಾಷಣೆ ಬರೆಸಿ!

Sunday, November 8, 2009

ಜನರೇ ಕಾರಣ -ರಾಜಕಾರಣಿಗಳ ಮೇಲೊಂದು ಅನುಕಂಪದ ನೋಟ

ನಾರಾಯಣ ನಾರಾಯಣ!
ಹಲವು ದಿನಗಳಿಂದ ನೋಡ್ತಾ ಇದ್ದೇನೆ. ಮುಖ ನೋಡಲ್ಲ ಅಂತಾರೆ, ಮತ್ತೆ ಅಣ್ಣ ತಮ್ಮ ಅಂತಾರೆ, ಎಲ್ಲದ್ರ ಜೊತೆ ರಾಜ್ಯದ ಹಿತಕ್ಕಾಗಿ ಅಂತಾನೇ ಇರ್ತಾರೆ. ನಿಮಗೆಲ್ಲಾ ಗೊತ್ತಿರೋ ರೀತಿ ಅವರೇ ನಿಮ್ಮ ರಾಜಕಾರಣಿಗಳು.

ಮನೆ ಕಟ್ಟಿಸುತ್ತೆ, ಪರಿಹಾರ ಕೊಡುತ್ತೆ ಅಂತ ಕಾಯ್ತಿರೋ ಉತ್ತರ ಕರ್ನಾಟಕದ ಸಂತ್ರಸ್ತ ಜನ ಕೂಡಾ ಸರಕಾರದ ಮೇಲೆ ಭರವಸೆಯಿಂದ ಕಾಯ್ತಾ ಇದಾರೆ. ಎಲ್ಲಾ ಜನ ರಾಜಕಾರಣಿಗಳನ್ನ ಬೈತ್ತಾ ಇದಾರೆ. ನಾರಾಯಣ ನಾರಾಯಣ!

ಪ್ರೀತಿಯ ಜನರೇ,
ನಿಮ್ಮ ಪರಿಸ್ಥಿತಿ, ಅಸಹಾಯಕತೆ ನಂಗೆ ಅರ್ಥ ಆಗುತ್ತೆ. ಆದ್ರೆ ನಿಮ್ಮದೇನೂ ತಪ್ಪಿಲ್ಲ, ರಾಜಕಾರಣಿಗಳೇ ದುಷ್ಟರು ಅಂತ ನಿಮ್ಮ ಪರ ನಿಲ್ಲೋ ಸ್ಥಿತಿಯಲ್ಲಿ ನಾನಿಲ್ಲ. ಯಾಕಂದ್ರೆ ನಿಮಗಿಂತ ಜಾಸ್ತಿ ಅನುಕಂಪ ನಂಗೆ ನಾಯಕರ ಮೇಲಿದೆ. ಅವರನ್ನ ಬೈಯೋದು ನಿಮ್ಮ ಮನಸ್ಸಿನ ಭಾರ ಕ್ಡಿಮೆಯಾಗಿಸಬಹುದು, ಮಾಧ್ಯಮಗಳಿಗೆ ಅದು ಉದ್ಯೋಗವಾಗಿರಬಹುದು. ಆದ್ರೆ ಬರೀ ಸುತ್ತಾಡ್ತಿರೋ ನನ್ನಂತೋರಿಗೆ ಮಾತ್ರ ಅವರನ್ನ ನೋಡಿದ್ರೆ ಮರುಕ ಬರುತ್ತೆ.
ಅಂಥವರಿಗೆ ಯಾಕೆ ಓಟು ಹಾಕಿದ್ರಿ ಅಂತ ನಾನು ಕೇಳ್ತೀನೆ ಅಂತ ನಿಮಗೂ ಗೊತ್ತು. ಬರೀ ರೌಡಿಗಳೇ ಓಟಿಗೆ ನಿಂತ್ರೆ ಇನ್ನೇನ್ ಮಾಡ್ಲಿ ಅಂತ ತಾನೇ ನಿಮ್ಮ ಉತ್ತರ? ತಡೀರಿ. ಇದೇ ಬಳ್ಳಾರಿ ಹೇಗಿತ್ತು ನೆನಪು ಮಾಡ್ಕೊಳ್ಳಿ. ಆಗ ಬಿಜೆಪಿ ನಿಜವಾಗಿಯೂ ಹಣದ ಹಿಂದೆ ಬಿದ್ದಿರ್ಲಿಲ್ಲ. ಆದ್ರೆ ಬಳ್ಳಾರಿಯಲ್ಲಿ ಅಷ್ಟಿಟ್ಟು ಹಣ ಹಂಚಿ, ಬಡವರನ್ನ ಓಲೈಸಿ ಗೆಲ್ಲೋ ಕಾಂಗ್ರೆಸ್ ಮೆರಿತಾ ಇತ್ತು. ಆವತ್ತು ಬಿಜೆಪಿಗೆ ಓಟು ಹಾಕೋಣ ಅಂತ ನಿಮಗೇನಾದ್ರೂ ಅನ್ನಿಸ್ತಿತ್ತಾ? ಆವಾಗ ಬಿಜೆಪಿಯನ್ನು ಗೆಲ್ಲಿಸದ ನೀವು ಈಗೇಕೆ ಬಿಜೆಪಿಗೆ ಮುಗಿಬಿದ್ದು ಓಟು ಹಾಕ್ತೀರ? ಸುಷ್ಮಾರನ್ನು ಗೆಲ್ಲಿಸೊದಿಕ್ಕಾಗಿ ರಾಜಕೀಯ ಕಲಿತ ಜನ ಬಳ್ಳಾರಿ ರಾಜಕಾರಣವನ್ನು ಹೇಗೆ ತಿರುಗಿಸಿದ್ರು ನಿಮಗೆ ಗೊತ್ತು ತಾನೆ?
ಹಣ, ಅವ್ಯವಹಾರ, ಹೊಲಸು ರಾಜಕೀಯ, ಭ್ರಷ್ಟಾಚಾರ, ನಾಟಕ ಅಂತೆಲ್ಲ ನೀವೇನನ್ನ ಕರೀತೀರೋ, ಎಲ್ಲಾ ಬಿಡೋಕೆ ರೆಡ್ಡಿಗಳು ಸಿದ್ಧರಿದಾರೆ. ಅವರನ್ನ ಗೆಲ್ಲಿಸೋಕೆ ನೀವು ರೆಡೀನಾ? ಹೌದು ಅಂತೀರ, ಆದ್ರೆ ನೀವು ಹಾಗೆ ಮಾಡಲ್ಲ ಅಂತ ನಂಗೊತ್ತು. ಅಲ್ಲಿಂದ್ಲೇ ಶುರು.
ಇದೇ ಯಡಿಯೂರಪ್ಪ, ಅನಂತು ಎಲ್ಲ ಸೇರಿ ಹಣ ಇಲ್ಲ, ಜನ ಬೆಂಬಲ ಇಲ್ಲ ಅಂತಿರೋ ಕಾಲದಲ್ಲಿ ಎಷ್ಟು ಕಷ್ಟ ಪಟ್ಟಿದ್ರು ಅಂತ ಗೊತ್ತಾ? ತಮ್ಮ ಉದ್ಯೋಗ, ವೈಯಕ್ತಿಕ ಜೀವನ, ನೆಮ್ಮದಿ ಎಲ್ಲಾ ಬಿಟ್ಟು ಬಂದವರು ಅಧಿಕಾರ ಬಂದ ಕಾರಣಕ್ಕಷ್ಟೇ ಬದಲಾದ್ರು ಅಂತೀರ? ಆ ಕಾಲದಲ್ಲಿ ಹಣ ಮಾಡ್ಬೇಕು ಅನ್ನೋದೇ ಉದ್ದೇಶ ಅಂತಿದ್ರೆ ಅಷ್ಟೆಲ್ಲಾ ಕಷ್ಟ ಬರ್ತಿದ್ರಾ?

Tuesday, November 3, 2009

ಆಡಳಿತವನ್ನೇ ಗುಜರಾತಿಗೆ ಹೊರಗುತ್ತಿಗೆ ನೀಡಿ

ನಾರಾಯಣ ನಾರಾಯಣ!
ಕೊನೆಗೂ ಕರ್ನಾಟಕದಲ್ಲಿ ವಿರೋಧ ಪಕ್ಷವೊಂದು ಕಾಣಿಸಿಕೊಂಡಿದೆ. ಅದೇ ಬಿಜೆಪಿ!
ಕಥೆ ಇಷ್ಟೇ:
ಪಕ್ಷದಲ್ಲಿ ಮೂಲ ಬಿಜೆಪಿಗರು ಹಲವರಿದ್ದಾರೆ. ಉದಾ: ಕರುಣಾಕರ ರೆಡ್ಡಿ, ಜನಾರ್ಧನ ರೆಡ್ಡಿ, ಶ್ರೀರಾಮುಲು. ಇವರೆಲ್ರೂ ನೇರವಾಗಿ ಬಿಜೆಪಿಗೇ ಸೇರಿದವರು. ಮೂಲತಃ ಮಣ್ಣಿನ ಮಕ್ಕಳಾದ ಇವರು ಕಷ್ಟದಿಂದ ಮೇಲೆ ಬಂದವರು. ಬಂಡೆ ಒಡೆಯುವುದೇ ಇವರ ಕಾಯಕ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಇವರೇ ಕಾರಣ ಅಂತಾರೆ ಜನ.
ದುರಾದೃಷ್ಟ ಅಂದ್ರೆ ರಾಜ್ಯದ ಅಧಿಕಾರದ ಚುಕ್ಕಾಣಿ ಇರೋದು ಜನಸಂಘ ಮೊದಲಾದ ಪಕ್ಷಗಳಿಂದ ವಲಸೆ ಬಂದ ಕೆಲವರ, ಇತರ ಸಂಘಟನೆಗಳಿಂದ ಬಂದ ಜನರ ಕೈಲಿ. ಈ ಜನ ಆ ಬಂಡೆ ಒಡಿಯೋರ ಕೆಲಸಕ್ಕೆ ತೊಂದರೆ ಕೊಡ್ತಾನೇ ಬಂದಿದ್ದಾರೆ.
ಬಂಡೆ ಒಡಿಯೋ ಜನರ ದೇಹ ಗಟ್ಟಿಮುಟ್ಟಾಗಿರುತ್ತೆ. ಆದ್ರೆ ನಮ್ ಆಡಳಿತ ಮಾಡೋ ಜನಕ್ಕೆ ಸ್ವಲ್ಪ ಶಕ್ತಿ ಬೇಕಲ್ವಾ? ಅದಕ್ಕೇ ಮೊನ್ನೆ ಮೊನ್ನೆ ಸುತ್ತೂರು ಮಠದಲ್ಲಿ ಎಲ್ರಿಗೂ ಯೋಗಾಸನ ಮಾಡಿಸಲಾಯ್ತು. ಎಲ್ಲಾ ಮಂತ್ರಿಗಳಿಗೂ ತುಂಬ ಶಕ್ತಿ ಬಂತು. ಮೋದಿ ಹಾಸ್ಪಿಟಲಿಂದ ಡಾಕ್ಟ್ರೂ ಬಂದ್ರು. ಕೊನೆಗೂ ಸರಕಾರ ದಷ್ಟ ಪುಷ್ಟ, ಆರೋಗ್ಯವಂತವಾಯ್ತು.
ಅದ್ರಿಂದಾಗಿಯೇ ಇರಬಹುದು. ಬಳ್ಳಾರಿಯನ್ನು ಆಳುತ್ತಿದ್ದ ಮೂಲ ಬಿಜೆಪಿಯ ಮಂತ್ರಿಗಳಿಗೆ ತಮ್ಮ ಹೊಸ ಶಕ್ತಿ ಸಂಪೂರ್ಣ ರಾಜ್ಯವನ್ನಾಳಲು ಸಾಕು ಎಂಬ ಭಾವನೆ ತಂದಿತು. ಆಗ ಬಂತು ಪ್ರವಾಹ. ಪರಿಹಾರ ಮಾಡ್ಬೇಕು ಎಂಬ ಅತಿಯಾದ ಉತ್ಸಾಹ ಎರಡೂ ಬಣಕ್ಕೂ. ಹೌದು, ಪ್ರವಾಹದಲ್ಲಿ ಎರಡು ಬಣಗಳು ಸೃಷ್ಟಿಯಾಗಿ ಆಗಿತ್ತು. ನಾವೇ ಪರಿಹಾರ ಮಾಡ್ತೇವೆ. ನೀವು ಸುಮ್ಕಿರಿ ಅಂತ ವಲಸಿಗರ ಗುಂಪು; ಇಲ್ಲ, ನಮಗೇ ಹೆಚ್ಚು ಶಕ್ತಿ ಇದೆ. ನಾವೇ ಪರಿಹಾರ ಮಾಡ್ತೇವೆ ಅಂತ ಮೂಲ ಬಿಜೆಪಿಗರು. ನೆರೆ ಪರಿಹಾರದ ಬಗ್ಗೆ ಅತಿಯಾದ ಕಾಳಜಿ ಮಿತ್ರ ಪಕ್ಷಗಳ ನಿದ್ದೆಗೆಡಿಸಿತು. ಇದು ಸಮ್ಮಿಶ್ರ ಸರಕಾರವಲ್ಲದಿದ್ರೂ ಬಿಜೆಪಿಯು ಜೆಡಿಎಸ್, ಕಾಂಗ್ರೆಸ್ ಮುಂತಾದ ಮಿತ್ರಪಕ್ಷಗಳನ್ನು ಹೊಂದಿರುವುದು ವಿಶೇಷ.
ಮಿತ್ರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತುಂಬಾ ಬೇಸರ. ಒಳ್ಳೆದಾಗ್ಲಿ ಅಂತ ಆಶಿಸಿದ್ರು. "ಛೆ, ಹೀಗಾಗ ಬಾರ್ದಿತ್ತು, ಎಲ್ಲಾ ತಣ್ಣಗಾಗುತ್ತೆ" ಅಂತಂದ್ರು.

---
ಹೀಗೆಲ್ಲ ಆಗ್ತಾ ಇದ್ರೆ ನಂಗನಿಸಿದ್ದು: ಇವರಿಗೆ ಆಡಳಿತ ಮಾಡೋದಿಕ್ಕಾಗಲ್ಲ ಅಂದ್ರೆ ಅದನ್ನು ಗುಜರಾತಿಗೆ ಹೊರಗುತ್ತಿಗೆ (out source) ನೀಡ ಬಹುದಲ್ವಾ? ಅವರು ಅಲ್ಲಿಂದಾದ್ರೂ ಖಂಡಿತಾ ಸ್ವಲ್ಪ ಚೆನ್ನಾಗೇ ನಡೆಸ್ಬಹುದಲ್ವಾ?