Thursday, April 10, 2008

ಬಡವರಿಗೆ ಉಚಿತ ಇಂಟರ್ನೆಟ್, ಕಡಿಮೆ ದರದಲ್ಲಿ ಪಿಜ್ಜಾ...

ನಾರಾಯಣ ನಾರಾಯಣ!
ಈ ಬಾರಿ ಚುನಾವಣೇಲೆ ಕಾಂಗ್ರೆಸ್ ಗೆದ್ಮೇಲೆ ಬಡವರಿಗೆ ಉಚಿತ ಕಲರ್ ಟಿವಿ, ೨ ರೂ. ಗೆ ಅಕ್ಕಿ, ೩% ಬಡ್ಡಿ ದರದಲ್ಲಿ ಸಾಲ ಇತ್ಯಾದಿ ಸಿಗುತ್ತೆ ಅಂತ ಘೋಷಣೆ ಹೊರಬಿದ್ದದ್ದೇ ತಡ, ಸಿ.ಆರ್.ಟಿ ಟಿವಿಗೆಲ್ಲ ಓಟು ಹಾಕಲು ನಾವೇನೂ ಕೊಂಗರಲ್ಲ, ನಮಗೆ ಎಲ್.ಸಿ.ಡಿ. ಟಿವಿಯೇ ಬೇಕೆಂದು ಕರ್ನಾಟಕದ ಜನರು ಆಗ್ರಹಿಸಿದ್ದಾರೆ. ರೈತರಿಗೆ ಸಿಗುವ ೩% ಬಡ್ಡಿದರದಲ್ಲಿ ಸಾಲದ ಭರವಸೆಯಿಂದ ಖುಷಿಯಾದ ರಿಯಲ್ ಎಸ್ಟೇಟ್ ಕುಳಗಳು, ತಾವೂ ರೈತರೆಂದು ಸಾಬೀತು ಪಡಿಸಲು ಈಗಾಗಲೇ ಕೆಲವು ಗಿಡಗಳನ್ನು ನೆಡಿಸಿದ್ದಾರೆ. ೩% ಬಡ್ಡಿಗೆ ಪಡೆದ ಸಾಲದ ಹಣವನ್ನು ಅಧಿಕ ಬಡ್ಡಿದರದಲ್ಲಿ ಅದೇ ಬ್ಯಾಂಕಿನಲ್ಲಿ ಠೇವಣಿ ಹೂಡಿ ಬಡ್ಡಿಯನ್ನು ಸಂಪಾದಿಸುವ ಯೋಜನೆ ಅವರದು. ಜೊತೆಗೆ, ಆ ಸಾಲವನ್ನೂ ಮುಂದಿನ ಬಜೆಟ್ಟಿನಲ್ಲಿ ಮನ್ನಾ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಭರವಸೆಗಳಿಂದ ಪ್ರೇರಿತವಾಗಿರುವ ಇತರ ಪಕ್ಷಗಳೂ ತಮ್ಮ ಪ್ರಣಾಲಿಕೆಗಳನ್ನು ಭರದಿಂದ ಸಿದ್ಧಪಡಿಸುತ್ತಿದ್ದು, ಈ ಕೆಳಗಿನ ಅಂಶಗಳನ್ನು ಬರೆಯುತ್ತಿರುವುದು ಕಂಡುಬಂತು:

- ಕಡುಬಡವರಿಗೆ ಉಚಿತ ಇಂಟರ್ನೆಟ್: ನಾವು ಕಾಂಗ್ರೆಸ್ಸಿನಂತೆ ತಮಿಳುನಾಡಿನ ಪ್ರಣಾಳಿಕೆ ರಿಮೇಕ್ ಮಾಡುವುದಿಲ್ಲ. ಕರುಣಾನಿಧಿಗೆ ಸ್ವಂತ ಕೇಬಲ್ ನೆಟ್ವರ್ಕ್ ಇದೆ. ಟಿವಿ ಕೊಟ್ಟ್ರೆ ವ್ಯಾಪಾರ ಜಾಸ್ತಿ ಆಗ್ತದೆ ಅಂತ ಕೊಟ್ಟ್ರು. ನಾವು ಅದನ್ನೇ ಮಾಡೋದು ತಪ್ಪು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತ ವಯರ್-ಲೆಸ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ನೀಡುತ್ತೇವೆ. ಯೋಜನೆಯು ಕಡುಬಡವರಿಗೆ ಮಾತ್ರ ಲಭ್ಯವಿದ್ದು ಐಶಾರಾಮೀ ಉಪಕರಣಗಳಾದ ವಾಹನ, ಟಿವಿ, ಕಂಪ್ಯೂಟರ್ ಉಳ್ಳವರಿಗೆ ನೀಡಲಾಗುವುದಿಲ್ಲ.

- ಈ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಕಾಂಗ್ರೆಸ್ ಟಿವಿ ಪಡೆದ ಮನೆಗಳಿಗೆ ವಿದ್ಯುತ್ ಸಂಪರ್ಕ: ಈ ನಿರ್ಧಾರದ ಬಗ್ಗೆ ನಾವು ಅಚಲರಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ವಿದ್ಯುತ್ ನೀಡ ಬೇಕಿಲ್ಲ ಹಾಗೂ ನಾವು ಅಧಿಕಾರಕ್ಕೆ ಬಂದರೆ ಯಾರಿಗೂ ಟಿವಿ ಸಿಗುವುದಿಲ್ಲ ಎಂಬ ಧರ್ಯ ನಮಗಿದೆ.

- ಬಡವರಿಗೆ ಕಡಿಮೆ ದರದಲ್ಲಿ ಪಿಜ್ಜಾ: ರಾಜ್ಯದಲ್ಲಿ ಬಡತನ ಜಾಸ್ತಿಯಾಗುತ್ತಿದ್ದು ಅನೇಕರಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟವಿದೆ ಎಂದು ಮನಗಂಡ ನಮ್ಮ ಪಕ್ಷ, ಬಡವರಿಗೆ ಕೇವಲ ೯೫ ರೂ. ಗಳಿಗೆ ಪಿಜ್ಜಾ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಪಿಜ್ಜಾ ಕಾರ್ಡ್ ಎಂಬ ವಿನೂತನ ಕ್ರೆಡಿಟ್ ಕಾರ್ಡ್ ಮಾದರಿಯ ಕಾರ್ಡನ್ನು ಬಡವರಿಗೆ ವಿತರಿಸುವ ಯೋಜನೆಯಿದ್ದು, ಅದನ್ನು ಉಪಯೋಗಿಸಿ ಪಿಜ್ಜಾ ಪಡೆದರೆ ತಮ್ಮ ಬ್ಯಾಂಕ್ ಖಾತೆಯಿಂದ ಕೇವಲ ೯೫/- ರೂ. ಕಡಿತವಾಗಲಿದೆ.