Tuesday, November 4, 2008

ಭಯೋತ್ಪಾದಕರಿಗೇ ಭಯ -ಮನೆ ಸಚಿವರು

ನಾರಾಯಣ ನಾರಾಯಣ!
ಈಗೀಗ ಭೂಮಿಗೆ ಬರುವುದೇ ಭಯವಾಗಿ ಬಿಟ್ಟಿದೆ. ಇತ್ತೀಚೆಗೆ ಒಂದು ದಿನ ಆರಾಮವಾಗಿ ತಿರುಗಾಡ್ತಾ ಇದ್ದೆ. ಭೂಮಿಯಿಂದ ಢಂ ಢಂ ಶಬ್ಧ ಕೇಳಿಸ್ತು. ಓಹೋ ದೀಪಾವಳಿ ಬಂತೇನೋ ಅಂತ ಅಲ್ಲಿ ಯಾರನ್ನೋ ಕೇಳಿದ್ರೆ ಅದು ಬಾಂಬ್ ಅಂತೆ!
ಇಷ್ಟೆಲ್ಲ ಸ್ಫೋಟ ಆಗ್ತಾ ಇದೆ, ಮನೆ ಸಚಿವರು ಏನು ಮಾಡ್ತಾರೆ ಕೇಳೋಣ ಅಂತ ಅವರ ಬಳಿಗೆ ಹೋಗಿ ಮಾತಾಡ್ಸಿದೆ.
ನಾ. : ನಾರಾಯಣ ನಾರಾಯಣ. ಶಿವರಾಜರಿಗೆ ನಮಸ್ಕಾರ...
ಮ.ಸ. : ನಮಸ್ಕಾರ ನಾರದರೇ ಬರ್ಬೇಕು.
ನಾ. : ಸಚಿವರೇ, ಆರಾಮನಾ ಅಂತ ನಿಮ್ಹತ್ರ ಕೇಳಲ್ಲ. ಈ ಬಾಂಬ್ ಸ್ಫೋಟಗಳ ಬಗ್ಗೆ ವಿಚಾರಿಸಿ ಹೋಗೋಣ ಅಂತ ಬಂದೆ.
ಮ.ಸ. : ನಾನು ಇಂದು ನಡೆದ ಸ್ಫೋಟವನ್ನು ಖಂಡಿಸ್ತೇನೆ. ಸ್ಫೋಟವನ್ನು ಯಾರೇ ಮಡಿರ್ಲಿ, ಅವರನ್ನು ಸರಕಾರ ಬಂಧಿಸದೆ ಬಿಡಲ್ಲ. ದೇಶದ ಭದ್ರತೆ ನಮ್ಮ ಪ್ರಥಮ ಆದ್ಯತೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಸರಕಾರ ಸನ್ನದ್ಧವಾಗಿದೆ. ಈ ಧಾಳಿಯ ಹಂದೆ ಸಮಾಜ ಘಾತುಕ ಶಕ್ತಿಗಳ ಕೈವಾಡವನ್ನು ಶಂಕಿಸಲಾಗಿದೆ.
ನಾ.: ಅಯ್ಯಯ್ಯೋ! ಇವತ್ತೂ ಸ್ಫೋಟ ಆಯ್ತ? ನಂಗೆ ಗೊತ್ತೇ ಆಗಿರ್ಲಿಲ್ಲ!
ಮ.ಸ.: ಅಬ್ಬ! ಇವತ್ತು ಸ್ಫೋಟ ಆಗ್ಲಿಲ್ವ? ನೀವು ಸ್ಫೋಟದ ಬಗ್ಗೆ ಕೇಳಿದಾಗ ಇವತ್ತೂ ಆಯ್ತೇನೋ ಅಂದ್ಕೊಂಡೆ. ಇವತ್ತೇನಾದ್ರು ಸ್ಫೋಟ ಆಗಿ ನಂಗೆ ಗೊತ್ತೇ ಇರ್ಲಿಲ್ಲ ಅಂದ್ರೆ ನನ್ನ ಮಾನ ಎಲ್ಲಿ ಹೋಗುತ್ತೋ ಅಂತ ಹಾಗಂದೆ, ಬಾಂಬ್ ಸ್ಫೋಟ ಆದ್ರೆ ಸಾಮಾನ್ಯ ನಂಗೆ ಗೊತ್ತಾಗೇ ಆಗುತ್ತೆ. ನಮ್ಮ ಗುಪ್ತದಳ ತುಂಬಾ ಬಲಿಷ್ಠವಾಗಿದೆ. ಎಲ್ಲಾ ಟಿವಿ ಚಾನೆಲುಗಳನ್ನೂ ನೋಡ್ತಾ ಇರಿ, ಏನೇ ಆದ್ರೂ ನಂಗೆ ತಿಳಿಸಿ ಅಂತ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೀನಿ. ಆದ್ರೂ ಯಾಕೆ ಇನ್ನೂ ಸುದ್ದಿ ಬರ್ಲಿಲ್ಲ ಅಂದ್ಕೊಂಡೆ. ಸರಅದನ್ನ ಬಿಟ್ಟು ಬಿಡಿ.
ನಾ.: ಸಂತೋಷ... ಅದೆಲ್ಲಾ ಸರಿ, ಇದನ್ನೆಲ್ಲ ತ್ಡಿಯೋಕೆ ಯಾಕೆ ನಿಮಿಗೆ ಸಾಧ್ಯ ಆಗ್ತಾ ಇಲ್ಲ?
ಮ.ಸ.: ಸಮಸ್ಯೆ ಏನಂದ್ರೆ, ನಂ ಭಯೋತ್ಪಾದಕರಿಗೆ ತುಂಬ ಭಯ. ಬಾಂಬ್ ಇಟ್ಟಿದ್ದೀವೆ ಅಂತ ಈ ಮೇಲ್ ಮಾಡ್ತಾರೆ ಹೊರತು ಎಲ್ಲಿ ಅಂತ ಸ್ಪಷ್ಟವಾಗಿ ಹೇಳೋದೇ ಇಲ್ಲ. ನೀವೇ ಹೇಳಿ, ಅವರ ಹೇಳ್ದೇ ಇದ್ರೆ ಅದನ್ನು ಪತ್ತೆಹಚ್ಚೋಕಾಗುತ್ತ?
ನಾ.: ಹೌದು, ನೀವು ಹೇಳೋದು ಸರಿ ಇದೆ.