Thursday, July 29, 2010

ಶ್ರೀರಾಮುಲು ಕಟ್

ನಾರಾಯಣ ನಾರಾಯಣ!

ಕ್ಷೌರದಂಗಡಿಗೆ ಹೋಗಿದ್ದೆ. ಹೌದು, ನಾನೆ... ಯಾಕೆ?
ಓ, ಜುಟ್ಟು ಬಿಟ್ಟಿರೋ ನಾನ್ಯಾಕೆ ಕ್ಷೌರದಂಗಡಿಗೆ ಅಂತಾನ? ಗುಟ್ಟಿರೋದೇ ಅಲ್ಲಿ. ಲೋಕದ ಸುದ್ದಿಗಳೆಲ್ಲ ನಂಗೆ ಗೊತ್ತಾಗೋದೇ ಅಲ್ಲಿ! ಕ್ಷೌರಕ್ಕೆ ಕಾಯೋರ ಮಾತುಗಳು ನಂಗೆ ಎಷ್ಟೋ ಸುದ್ದಿಗಳ ಮೂಲ. ಇವತ್ತು ಯಾವ ಸುದ್ದಿ ಸಿಗುತ್ತೆ ಅನ್ನೋ ಕುತೂಹಲದಲ್ಲಿದ್ದಾಗಲೇ ಕುರ್ಚಿ ಮೇಲೆ ಕೂತವನು ಶ್ರೀರಾಮುಲು ಕಟ್ ಅಂದು ಬಿಟ್ಟ. ಉದ್ದ ಕೂದಲು ಬಿಡೋ ಶ್ರೀರಾಮುಲು ವಿನ್ಯಾಸ ಯಾಕೆ ಅಂತ ಕುತೂಹಲದಿಂದಲೇ ಕೇಳಿದೆ.

ಶ್! ಅಂದವನೇ ಅಲ್ಲಿದ್ದ ಟಿವಿಯತ್ತ ತನ್ನ ಕಣ್ಣು ನೆಟ್ಟ. ಯಾವಾಗಲೂ ಸನ್ ಟಿವಿ ಇರ್ತಿದ್ದ ಟಿವಿಯಲ್ಲಿ ಟಿವಿ9 ಬರ್ತಾ ಇತ್ತು!
ಬಳ್ಳಾರಿಗೆ ಕೆಟ್ಟ ದೃಷ್ಟಿ ಅಂತಾರೆ ಶ್ರೀರಾಮುಲು ಮತ್ತು ರೆಡ್ಡಿ ಬ್ರದರ್ಸ್, ಅವರಿನ್ನೂ ಬಚ್ಚಾ ಅಂತಾರೆ ಕಾಂಗ್ರೆಸ್, ಇದು ಈ ಹೊತ್ತಿನ ವಿಷೇಶ -ಶ್ರೀರಾಮುಲು ಕಟ್.

ಕೇಶ ಮಂಡನ ವಿಶೇಷ ಕಾರ್ಯಕ್ರಮಕ್ಕೆ ಸ್ವಾಗತ... ಅಂತೆಲ್ಲಾ ಕೇಳಿದಾಗ ಅರ್ಥ ಆಯ್ತು ಇದ್ಯಾವ ಕಟ್ ಅಂತ!
ಅಲ್ಲ, ಅರುವತ್ತು ವರ್ಷದಿಂದ ಬಳ್ಳಾರಿಯ ಕಡೆಗೆ ತಲೆಯೇ ಹಾಕದ ಕಾಂಗ್ರೆಸ್ ಈಗೇಕೆ ಇಲ್ಲಿ ಬರ್ತಾ ಇದೆ ಅಂತ ಬಳ್ಳಾರಿಯ  ಜನಕ್ಕೆಲ್ಲಾ ಭಯವಾಗಿದೆಯಂತೆ. ಹಿಂದೊಮ್ಮೆ ಇದೇ ಕ್ಷೇತ್ರದಿಂದ ಲೋಕಸಭೆಗೆ ಗೆದ್ದಿದ್ದ ಸೋನಿಯಾಗೆ ಬಳ್ಳಾರಿ ಹೆಸರು ಮತ್ತೆ ನೆನಪಾಗಿರಬಹುದು.

ಡ್ಯಾನ್ಸ್ ಮಾಡ್ತಾ, ಹಾಡು ಹಾಡ್ತಾ, ಭರ್ಜರಿ ಊಟದ ಜತೆಗೆ ಬಳ್ಳಾರಿ ಪಿಕ್-ನಿಕ್ ಹೊರಟಿರುವ ಪಾರ್ಟಿ ಆಡಳಿತ ಪಕ್ಷದ ಥರಾ ಸಂಭ್ರಮದಲ್ಲಿದ್ದಾರೆ. ಅವರಿಗೆ ಮೈಸೂರು ಪೇಟ, ಹಾರಾರ್ಪಣೆ ಇತ್ಯಾದಿ ನೋಡಿಯೇ ಜನ ಖುಶಿಯಾಗಿದ್ದಾರೆ. ಇಂತಹ ಹೋರಾಟಗಳನ್ನು ಮಾಡುತ್ತಲೇ ಬಂದ ಜನತಾ ಪರಿವಾರದಲ್ಲಿ ಅನುಭವ ಪಡೆದಿರುವ ಸಿದ್ರಾಮು, ಇಬ್ರಾಹಿಮ್ಮು, ದೇಸ್ಪಾಂಡೆ ಮೊದಲಾದವರೇ ಯಾತ್ರೆಯ ನೇತೃತ್ವ ವಹಿಸಿದ್ದು, ಅನುಭವ ಫಲ ನೀಡಿದೆ.
ವಿಪಕ್ಷದವರು ಇಷ್ಟೆಲ್ಲಾ ಸಂಭ್ರಮದಲ್ಲಿರುವಾಗ, ತಲೆ ಬೋಳಿಸಿ, ಕಪ್ಪು ಬಟ್ಟೆ ಧರಿಸಿ, ಬರಿಗಾಲು, ಮಿತಾಹಾರ ಮೂಲಕ ಆಡಳಿತ ಪಕ್ಷದವರು ವಿರೋಧದ ಮಾತಾಡುತ್ತಿದ್ದಾರಲ್ಲ!

ಇದು ಈ ಹೊತ್ತಿನ ವಿಷೇಶ... ಕ್ಷಣ ಕ್ಷಣದ ಸುದ್ದಿಗಾಗಿ